ಆಸ್ಪತ್ರೆಗೆ ಸೇರಿ ಕೆಲಕಾಲ ಇರುವಂಥ ಪ್ರಸಂಗಗಳಲ್ಲಿ ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ದಂಥ ಆರೋಗ್ಯ ವಿಮೆಗಳು ಹೆಚ್ಚಿನ ಖರ್ಚುಗಳನ್ನು ನಿಭಾಯಿಸಲು, “ಸರ್ವರಿಗೂ ಆರೋಗ್ಯ” ಎಂಬ ಗುರಿಯನ್ನು ಸಾಧಿಸಲು, ವರದಾನಗಳಾಗಿವೆ ಎಂಬಂತೆ ಬಿಂಬಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳೊಂದಿಗೆ ಸರಕಾರವು ಒಪ್ಪಂದ ಮಾಡಿಕೊಂಡಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ನೀಡಲು ಸಾಧ್ಯವಿಲ್ಲದ ಎಷ್ಟೋ ವಿಶೇಷ ಚಿಕಿತ್ಸೆಗಳನ್ನು ಖಾಸಗಿಯವರು ನೀಡುತ್ತಾರೆಂದು ನಂಬಲಾಗಿದೆ. ಆದರೆ ಇತ್ತ ಸರಕಾರದಲ್ಲೂ ಉತ್ತರದಾಯಿತ್ವ ಇಲ್ಲದೆ, ಅದನ್ನು ಖಾಸಗಿಯಲ್ಲೂ ಕಾಣದೆ ರೋಗಬಾಧೆಯಿಂದ ನರಳುತ್ತಿರುವವರು ಮತ್ತಷ್ಟು ನರಳುವಂತಾಗಿದೆ.
2024ರ ಮೇ–ಜುಲೈವರೆಗೆ ನಾವು ಮಾಡಿರುವ ಒಂದು ಸಮೀಕ್ಷೆಯು ಈ ವಿಮೆಗಳೆಲ್ಲ ಎಂತಹ ಮಿಥ್ಯೆಯೆಂಬುದನ್ನು ತೋರಿಸಿಕೊಟ್ಟಿದೆ. ಈ ಹಿಂದೆ 2012-13ರಲ್ಲಿ ಜನಆರೋಗ್ಯ ಆಂದೋಲನ ಕರ್ನಾಟಕ ನಡೆಸಿದ ಅಧ್ಯಯನವು ಕೂಡ ಇದೇ ರೀತಿ ಅಂಶಗಳನ್ನು ತೋರಿಸಿದೆ. ಆರೋಗ್ಯ ವಿಮಾ ಯೋಜನೆಗಳು ಬಡ ಕುಟುಂಬಗಳಿಗೆ ಬೆಂಬಲ ನೀಡುತ್ತಿಲ್ಲ ಎಂಬುದಕ್ಕೆ ಇದೇ ರೀತಿಯ ಹಲವಾರು ಸಂಶೋಧನೆಗಳು ಸಾಕ್ಷಿಯಾಗಿವೆ.
ಸಾರ್ವತ್ರಿಕ ಆರೋಗ್ಯ ಆಂದೋಲನ – ಕರ್ನಾಟಕ (SAA-K)ನಡೆಸಿದ ಈ ಸಮೀಕ್ಷೆಯಲ್ಲಿ 116ಜನರನ್ನು ಸಂದರ್ಶಿಸಲಾಯಿತು. ರೋಗಿಗಳು ಚಿಕಿತ್ಸೆಗೆಂದು ಮಾಡಿರುವ ಖರ್ಚು, ಅನುಭವಿಸಿದ ಕಷ್ಟ ಮತ್ತು ವೇದನೆಗಳನ್ನು ಈ ಸಮೀಕ್ಷೆಯು ದಾಖಲಿಸಿದೆ. ಸರಕಾರವು ಹೊರತಂದಿರುವ ಆರೋಗ್ಯ ವಿಮೆಗಳು ಈ ಜನರಿಗೆ ಸಹಾಯಕ್ಕೆ ಬಂತೇ ಎಂದು ಕೂಡ ಸಮೀಕ್ಷೆ ನಡೆಸಲಾಯಿತು. ತಾಲೂಕು ಮಟ್ಟ, ಜಿಲ್ಲಾ ಮಟ್ಟಗಳಲ್ಲಿ ರೋಗಿಗೆ ಸಾಮಾನ್ಯ ಕಾಯಿಲೆಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುವ ಸಂದರ್ಭಗಳಲ್ಲಿ ಜನರು ಎಷ್ಟು ಹಣ ಖರ್ಚು ಮಾಡಬೇಕಾಯಿತು ಎಂಬ ವಿವರವನ್ನು ಈ ಸಮೀಕ್ಷೆಯು ಎತ್ತಿ ತೋರಿಸಿದೆ. ಜನರಿಗೆ ಸಹಾಯಕ್ಕೆ ಬರಬೇಕಾಗಿದ್ದ, ಅಥವಾ ಸಹಾಯಕ್ಕೆ ಬರುತ್ತಿವೆ ಎಂದುಕೊಂಡಿರುವ ಸರಕಾರೀ ಪೋಷಿತ ವಿಮಾ ಸೌಲಭ್ಯಗಳು ಜನರನ್ನು ಇನ್ನಷ್ಟು ಗೊಂದಲಕ್ಕೆ ದೂಡುತ್ತಿರುವುದೇ ಹೊರತು ಯಾವುದೇ ರೀತಿಯಲ್ಲಿ ಪ್ರಯೋಜನಕ್ಕೆ ಬಂದಿಲ್ಲ.

ಕಂಡುಬಂದ ಮುಖ್ಯ ಅಂಶಗಳು
- 102 ಜನರು ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರು ಮತ್ತು ಅವರಲ್ಲಿ94% ಜನರು ವಿಮೆಯನ್ನು ಹೊಂದಿದ್ದರು.
- ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾದವರಲ್ಲಿ 17% ರಷ್ಟು ಜನರು ತಮ್ಮ ವಿಮೆಯನ್ನು ಬಳಸಲು ಸಾಧ್ಯವಾಗಲಿಲ್ಲ, ಮತ್ತು 49% ರಷ್ಟು ಖಾಸಗಿ ಆಸ್ಪತ್ರೆಗಳಿಗೆ ವಿಮಾ ಉಪಯೋಗಿಸಲು ನಿರಾಕರಿಸಲಾಗಿದೆ.
- BPL/ಪಡಿತರ ಕಾರ್ಡ್ಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಬಳಕೆಮಾಡಲಾಗುತ್ತಿದೆ; ಖಾಸಗಿ ಆಸ್ಪತ್ರೆಗಳಲ್ಲಿ ಇದು AB-ArK ಆಗಿತ್ತು
- 102 ರಲ್ಲಿ 5 ಜನರಿಗೆ ಮಾತ್ರ (4.9%) ಉಚಿತವಾಗಿ ಚಿಕಿತ್ಸೆ ಸಿಕ್ಕಿದೆ. ಉಳಿದ 97 ಜನರು ತಮ್ಮ ವೇತನಕ್ಕಿಂತ ತುಂಬಾ ಹೆಚ್ಚಿನ ಹಣ ಕರ್ಚು ಮಾಡಬೇಕಾಗುತ್ತಿದೆ. .
- ಜನರು ವಿಮೆಯನ್ನು ಬಳಸಿಕೊಳ್ಳಲು ಸಾಧ್ಯವಾಗದಿದ್ದಾಗ ಹೋಲಿಸಿದರೆ ವಿಮೆಯನ್ನು ಬಳಸಿಕೊಂಡಾಗ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲೂ ಸಮಾನವಾದ (ಮತ್ತು ಕೆಲವೊಮ್ಮೆ ಹೆಚ್ಚು) ಹಣ ಖರ್ಚು ಮಾಡುತ್ತಿದ್ದಾರೆ.
- ವಿಮೆಯು ಜನರ ಖರ್ಚುಗಳನ್ನು ಕಡಿಮೆ ಮಾಡುತ್ತಿಲ್ಲ.
- ರೋಗಿಗಳಿಗೆ ಬಿಲ್ ಮತ್ತು ಅವರ ಚಿಕಿತ್ಸೆಗಾಗಿ ನಿಗದಿಪಡಿಸಿದ ಮೊತ್ತವನ್ನು ನೋಡಲು ಅವಕಾಶ ಇಲ್ಲ.
- ಔಷಧಿಗಳು ಮತ್ತು ಪರೀಕ್ಷೆಗಳು ಇನ್ನೂ ಉಚಿತವಾಗಿ ಲಭ್ಯವಿಲ್ಲ.
ದಾವಣಗೆರೆ ಜಿಲ್ಲೆಯ ಎಂಟು ವರ್ಷದ ಹುಡುಗಿಯೊಬ್ಬಳ ಕತೆ ಈ ಹುಡುಗಿಯ ತಾಯಿ ಬೀಡಿ ಕಟ್ಟುವ ಕೆಲಸ ಮಾಡುತ್ತಾಳೆ, ತಂದೆ ಕಟ್ಟಡ ಕಾರ್ಮಿಕ. ಹುಡುಗಿಯ ತಲೆ ಯಾವಾಗಲೂ ಒಂದು ಕಡೆ ವಾಲುತ್ತಿತ್ತು. ನಡೆಯುವುದು ಕಷ್ಟವಿತ್ತು. ಇದೊಂದು ತುರ್ತು ಚಿಕಿತ್ಸೆಯ ಕೇಸೆಂದು ತಿಳಿದು ತಾಯ್ತಂದೆಯರು ಮಗುವನ್ನು ಒಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ದಾಖಲಾಗಲು , ಚಿಕಿತ್ಸೆ, ಎಂ.ಆರ್.ಐ. ಎಂದು 36೦೦೦/-ರೂ. ಖರ್ಚಾಯಿತು. ಅವಳ ಬೆನ್ನು ಹುರಿಯಲ್ಲಿ ಒಂದು ಗಡ್ಡೆಯಾಗಿರುವುದಾಗಿಯೂ, ಅದನ್ನು ಆಪರೇಶನ್ ಮಾಡಿ ತೆಗೆಯಬೇಕು, ಅದಕ್ಕಾಗಿ ಆಸ್ಪತ್ರೆಯಲ್ಲಿ ಇರಬೇಕೆಂದೂ ಆಯಿತು. ಸರಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲದ್ದರಿಂದ ಇನ್ನೊಂದು ಖಾಸಗಿ ಆಸ್ಪತ್ರೆಗೆ ನ್ಯೂರೋ ಸರ್ಜನ್ಗೆ ತೋರಿಸಲಾಯಿತು. ಆದರೆ ಅಲ್ಲಿಯೂ ಸರಕಾರದ ಆರೋಗ್ಯ ವಿಮೆ ಪಡೆಯಬೇಕೆಂದರೆ ಮಗುವಿನ ಹೆಸರು ರೇಶನ್ ಕಾರ್ಡಿನಲ್ಲಿ ಇರಬೇಕೆಂದು ಹೇಳಲಾಯಿತು. ಇಲ್ಲಿ ಆಗುವುದಿಲ್ಲ ಎಂದು ತಂದೆ ತಾಯಿ ಮಗಳನ್ನು ಮಂಗಳೂರಿಗೆ ಒಯ್ದರು. ಸುಮಾರು 10 ೦೦೦/-ರೂ ಖರ್ಚಾಯಿತು. ಆದರೆ ಅಲ್ಲಿಯೂ ಮಗುವಿನ ಹೆಸರು ರೇಶನ್ ಕಾರ್ಡಿನಲ್ಲಿ ಇರದ ಹೊರತು ಆರೋಗ್ಯ ವಿಮೆ ಸಿಗುವುದಿಲ್ಲ ಎಂದೇ ಸರ್ಜನರು ಹೇಳಿದರು. ಮಗಳ ಹೆಸರನ್ನು ರೇಶನ್ ಕಾರ್ಡಿನಲ್ಲಿ ಸೇರಿಸಲು ತಂದೆ ಮೂರು ತಿಂಗಳ ಕಾಲ ಗುದ್ದಾಡಿದರೂ ಆಗಲಿಲ್ಲ. ಗೃಹಲಕ್ಷ್ಮಿಗಾಗಿ ಪೂರ್ತಿಯಾಗಿ ʻಸರ್ವರ್ ಬಂದುಮಾಡಿದ್ದರಿಂದʼ ರೇಶನ್ ಪೋರ್ಟಲ್ ತೆರೆದುಕೊಳ್ಳಲಿಲ್ಲ. ಕಡೆಗೆ ತಾಯಿ ತಂದೆ ದಾವಣಗೆರೆಯ ಜಿಲ್ಲಾಸ್ಪತ್ರೆಗೆ ಬಂದು ತಮಗೆ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕಕ್ಕೆ ಒಂದು ಪತ್ರವನ್ನಾದರೂ ಕೊಡಿ ಎಂದು ಕೇಳಿಕೊಂಡರೆ ಅದೂ ಸಿಗಲಿಲ್ಲ. ರೋಗ ತಪಾಸಣೆಗೆ ಅವಶ್ಯವಾಗಿದ್ದ ʻಕೋಡ್’ ಸಿಗದ ಕಾರಣಕ್ಕೆ ಈ ಪತ್ರವನ್ನು ಕೊಡಲಿಕ್ಕೂ ಜಿಲ್ಲಾಸ್ಪತ್ರೆಗೆ ಸಾಧ್ಯವಾಗಲಿಲ್ಲ. ಈವರೆಗೆ ಹೋಗಿದ್ದ ಆಸ್ಪತ್ರೆಗಳೂ ಕೂಡ ಈ ಕೋಡ್ ಸಂಖ್ಯೆಯನ್ನು ಬರೆದುಕೊಟ್ಟಿರಲಿಲ್ಲ. ತಾಯ್ತಂದೆಯರು ಇನ್ನೊಂದು ಖಾಸಗಿ ನ್ಯೂರೋ ಸರ್ಜನ್ಗೆ ಕೋಡ್ ನಂಬರ್ ಹಾಕಿ ಕೊಡಲು ಕೇಳಿಕೊಂಡರು. ಅವರು ಒಪ್ಪಿದರು, ಆದರೆ ತಮ್ಮಲ್ಲೇ ಬಂದು ಆಪರೇಶನ್ ಮಾಡಿಸಿಕೊಳ್ಳಬೇಕೆಂಬ ಷರತ್ತಿನ ಮೇಲೆ. ಇಷ್ಟಾದರೂ ರೇಶನ್ ಕಾರ್ಡಿನಲ್ಲಿ ಹೆಸರಿಲ್ಲದ್ದರಿಂದ ಈ ಪತ್ರಗಳೂ ಉಪಯೋಗಕ್ಕೆ ಬಾರದಾದವು. ರೂ. 46,೦೦೦/- ಗಳನ್ನು ಖರ್ಚು ಮಾಡಿಯೂ ಮಗುವಿಗೆ ಚಿಕಿತ್ಸೆ ದೊರೆತಿಲ್ಲ. ಇವೆಲ್ಲ ಓಡಾಟಗಳಿಗಾಗಿ ತಂದೆ ಅಷ್ಟು ದಿನಗಳ ಕೂಲಿಯನ್ನು ಕಳೆದುಕೊಂಡಿದ್ದೇ ಬಂತು ಹೊರತು ಮಗುವಿಗೆ ಚಿಕಿತ್ಸೆ ದೊರೆಯಲಿಲ್ಲ. |
ಜನಸಾಮಾನ್ಯರು, ಅವರ ಬಳಿ ಬಿಪಿಎಲ್ (BPL) ಕಾರ್ಡ್ ಇದ್ದರೂ ಕೂಡ ಅನಾರೋಗ್ಯಕ್ಕೆ ಬಿದ್ದಾಗ ಎಷ್ಟು ಓಡಾಡಬೇಕಾಗುತ್ತದೆ, ಏನೇನು ಅನುಭವಿಸಬೇಕಾಗುತ್ತದೆ ಎಂಬುದನ್ನು ಈ ಕಥೆಯು ಎತ್ತಿ ತೋರಿಸಿಕೊಡುತ್ತದೆ.


ಈ ಚಿತ್ರವನ್ನು ನೋಡಿದಾಗ ಕಾರ್ಡ್ ಇದ್ದವರೂ ಕಾರ್ಡು ಇಲ್ಲದವರಂತೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎಂದು ಗೊತ್ತಾಗುತ್ತದೆ. ಅಂದರೆ ಆರೋಗ್ಯ ವಿಮಾ ಕಾರ್ಡು ಇದ್ದಾಗ ಹೆಚ್ಚಿನ ಉಪಯೋಗವೇನೂ ಆಗುವುದಿಲ್ಲ ಎಂಬುದು ಗೊತ್ತಾಗುತ್ತದೆ.
ಈ ಸಮೀಕ್ಷೆಯಿಂದ ಕಂಡುಬಂದಿದ್ದು:
- ಅನಾರೋಗ್ಯದಿಂದ ಆಸ್ಪತ್ರೆ ಸೇರುವ ಪ್ರಸಂಗಗಳು ಜನಸಮುದಾಯವನ್ನು ಬಡತನಕ್ಕೆ ದೂಡುತ್ತದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದವರೆಲ್ಲರೂ ನಿತ್ಯ ದುಡಿದು ಉಣ್ಣುವ ಕೂಲಿಕಾರರು, ಬೇರೆ ಬೇರೆ ಟ್ರೇಡ್ ಯೂನಿಯನ್ ಗಳ ಸದಸ್ಯರು, ಗ್ರಾಮೀಣ ಮತ್ತು ಆದಿವಾಸಿ ಸಮುದಾಯಗಳಿದ್ದರು. ಒಟ್ಟಾರೆಯಾಗಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿದ್ದವು.
- ಅಂಚಿನಲ್ಲಿರುವ ಸಮುದಾಯಗಳಿಗೆ ಮೇಲಿನ ಖರ್ಚೆಂಬುದು ದೊಡ್ಡ ಹೊರೆಯಾಗುತ್ತದೆ.
- ಅಷ್ಟೆಲ್ಲ ಪ್ರಚಾರ ಪಡೆದುಕೊಂಡಿರುವ ಆರೋಗ್ಯ ವಿಮೆಗಳು ನಿಜ ಅರ್ಥದಲ್ಲಿ ಜನರಿಗೆ ಸಹಾಯ ಮಾಡುವಂಥವುಗಳಲ್ಲ. ಬದಲಿಗೆ ಬಡಜನರಿಗೆ ಉಪಯೋಗವಾಗಿಯೂ ಇಲ್ಲ, ಮೇಲಿನ ಖರ್ಚನ್ನು ಕಡಿಮೆ ಮಾಡುವುದಕ್ಕೂ ಸಹಾಯವಾಗಿಲ್ಲ.
- ವಿಮೆಯನ್ನು ಪಡೆದುಕೊಳ್ಳಲು ಅದಕ್ಕಾಗಿ ಇರುವ;- ರೆಫರಲ್ ಕೋಡ್ ಗಳು, ಒಪ್ಪಿಗೆ ಪತ್ರ, ಖಾಸಗಿ ವಿಚಾರಗಳನ್ನು ಹೊರಹಾಕುವುದು, ರೋಗಿಯ ಚಿತ್ರಗಳನ್ನು ತೆಗೆಯುವುದು ಇವೆಲ್ಲ ಅಮಾನವೀಯವೆನಿಸುತ್ತವೆ.
- ತುರ್ತು ಸಂದರ್ಭಗಳಲ್ಲಿ – ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ವಿಮೆಯನ್ನು ಭರಿಸಿಕೊಳ್ಳುವ ಸೌಲಭ್ಯವಿದೆಯೆಂದು ಹೇಳಲಾಗುತ್ತದೆ. ಆದರೆ ನಿಜದಲ್ಲಿ ಒಂದೊಂದು ಚಿಕಿತ್ಸೆಗೂ ಅಪ್ರೂವಲ್ ಪಡೆಯಲು ರೋಗಿಗಳು ದೂರ ದೂರ ಪ್ರಯಾಣಿಸಬೇಕಾಗಿ, ಅದರಿಂದ ಸಾಕಷ್ಟು ಮೇಲಿನ ಖರ್ಚು ಮಾಡುವಂಥ ಪ್ರಸಂಗವಿದೆ.
- ಒಟ್ಟೂ ಎಷ್ಟು ಜನಕ್ಕೆ ಕೊಟ್ಟಿದೆ, ಪಡೆದವರ ಪಟ್ಟಿ, ಒಟ್ಟೂ ಹಂಚಿರುವ ಮೊತ್ತ ಇದನ್ನೆಲ್ಲ ಹೇಳಿಕೊಳ್ಳುವಾಗ ಅದನ್ನು ಉಪಗೋಸಿಕೊಳ್ಳಲು ಪ್ರಯತ್ನಿಸಿದವರ ಕಷ್ಟವನ್ನು ಮರೆಮಾಚುತ್ತವೆ.
- ಅವಶ್ಯಕತೆ ಇರುವವರಿಗೆ ಎಂದೂ ಸೌಲಭ್ಯಗಳು ತಲುಪದಂತೆ ಸೌಲಭ್ಯದ ಸುತ್ತ ಬೇಲಿಗಳನ್ನು ಹಾಕಿರಲಾಗುತ್ತದೆ.
- ಎಷ್ಟೋ ಚಿಕಿತ್ಸೆಗಳು ಒಂದು ಬಾರಿ ಆಸ್ಪತ್ರೆಯಲ್ಲಿ ದಾಖಲಾಗುವಲ್ಲಿ ಮುಗಿಯುವುದಿಲ್ಲ. ಹೊರರೋಗಿ ಚಿಕಿತ್ಸೆ, ತಾಲೂಕಾಸ್ಪತ್ರೆ, ಜಿಲ್ಲಾಸ್ಪತ್ರೆಗಳ ಉಪಚಾರಗಳು, . ಅನುಸರಣೆಯೂ ಬೇಕಾಗಿರುತ್ತದೆ. ಆದರೆ ಈಗಿನ ವಿಮಾ ಮಾದರಿಗಳೆಲ್ಲವೂ ಪ್ರಸಂಗವಶಾತ್ ಎಂದು ಬರೆದು ಮುಗಿಸುತ್ತವಾದ್ದರಿಂದ ಅವೆಲ್ಲಕ್ಕೂ ಕೈಯಿಂದಲೇ ಖರ್ಚು ಮಾಡಬೇಕಾದ ಪ್ರಸಂಗವಿದೆ.
ಮುಂದೇನು?
- ಸರಕಾರವುತನ್ನಸಾರ್ವತ್ರಿಕ ಆರೋಗ್ಯಸೇವೆಯನ್ನುಬಲಗೊಳಿಸಬೇಕು. ಮತ್ತುಅತಿಅವಶ್ಯವಾಗಿಬಜೆಟ್ಟನ್ನುಹೆಚ್ಚಿಸಬೇಕು.
- ಆರೋಗ್ಯ ಸೇವೆಯಲ್ಲಿ ಖರ್ಚು ವೆಚ್ಚಕ್ಕೆ ವಿಮೆ ಆಧರಿತ ಹಣ ನೀಡುವುದನ್ನು ನಿಲ್ಲಿಸಬೇಕು. ಸಾರ್ವತ್ರಿಕ ಆರೋಗ್ಯ ಸೇವೆಗಾಗಿ ಸಾರ್ವಜನಿಕ ಸಂಸ್ಥೆಗಳನ್ನು ಗಟ್ಟಿಗೊಳಿಸುವುದಕ್ಕೆ ಹಣ ಹಾಕಬೇಕು.
- ಸರಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಹೊರಗಡೆಯಿಂದ ಖರೀದಿ ಮಾಡುವುದಕ್ಕಾಗಿ ಚೀಟಿ ಬರೆದುಕೊಡುವುದು ವಿಪರೀತವಾಗಿದೆ ಎಂದು SAA-K ಅಧ್ಯಯನವು ತೋರಿಸುತ್ತದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಔಷಧಿಗಳ ಸರಬರಾಜನ್ನು ಉತ್ತಮಗೊಳಿಸಿ ಹೊರಗೆ ಬರೆದುಕೊಡುವ ಪದ್ಧತಿಯನ್ನು ಸರಕಾರವು ಸಂಪೂರ್ಣವಾಗಿ ನಿಲ್ಲಿಸಲೇಬೇಕು. ಈಗಾಗಲೇ ತಮಿಳುನಾಡು, ಕೇರಳ ಮತ್ತು ರಾಜಸ್ಥಾನಗಳಲ್ಲಿ ಇವನ್ನು ಮಾಡಲು ಸಾಧ್ಯವಾಗಿದೆ.
- ಇದೇ ರೀತಿ ಸಾರ್ವತ್ರಿಕ ಆಸ್ಪತ್ರೆಗೆ ಬಂದಾಗ ತಮ್ಮಲ್ಲಿ ಇಲ್ಲವೆಂದು ಬೇರೆ ಬೇರೆ ಪರೀಕ್ಷೆಗಳಿಗಾಗಿ ಹೊರಗೆ ಕಳಿಸುವುದೂ ಕೂಡ ನಿಲ್ಲಬೇಕು. ಇದೂ ಕೂಡ ರೋಗಿಗಳ ಮೇಲೆ ದೊಡ್ಡ ಹೊರೆಯನ್ನು ಹಾಕುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಒಳ್ಳೆಯ ಪ್ರಯೋಗಶಾಲೆಗಳಿರಬೇಕು.
- ತಮ್ಮಲ್ಲಿ ಚಿಕಿತ್ಸಾ ಸೌಲಭ್ಯವಿಲ್ಲದಿದ್ದರೆ ಒಪ್ಪಂದವಾಗಿರುವ (ಎಂಪೆನೆಲ್ಡ್) ಖಾಸಗಿ ಆಸ್ಪತ್ರೆಗೆ ಆ ಚಿಕಿತ್ಸೆಗೆಂದು ಹೋಗಲು ಹೇಳಲಾಗುತ್ತದೆ. ಆ ಆಸ್ಪತ್ರೆಗೆ ಕೊಡುವ ಹಣವನ್ನೇ ಸರಕಾರವು ತನ್ನ ವ್ಯವಸ್ಥೆಯನ್ನು ಬಲಪಡಿಸಲೆಂದು ಬಳಸಬೇಕು.
- ಆರೋಗ್ಯೋಪಚಾರದ ವಿಚಾರದಲ್ಲಿ ಯಾವುದೇ ರೀತಿಯ ಸರಕಾರಿ-ಖಾಸಗಿ ಒಪ್ಪಂದವನ್ನು ಸರಕಾರವು ಮಾಡಿಕೊಳ್ಳಬಾರದು. ಹೀಗೆ ಮಾಡಿದಾಗ ಜನರು ಹೆಚ್ಚೆಚ್ಚು ಖಾಸಗಿಯನ್ನೇ ಅವಲಂಬಿಸುತ್ತ ಹೋಗುತ್ತಾರೆ. ಸಾರ್ವಜನಿಕ ಸಂಸ್ಥೆಗಳು ವಿಶ್ವಾಸವನ್ನು ಕಳೆದುಕೊಳ್ಳುತ್ತವೆ. ಸರಕಾರದ ಸಂಸ್ಥೆಗಳನ್ನು ಬಲಪಡಿಸಿ ಜನರ ವಿಶ್ವಾಸವನ್ನು ಹೆಚ್ಚೆಚ್ಚು ಗಳಿಸಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ.